Ayodhya Ram Mandir: ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಈ ದೀಪಾವಳಿ ಕಳೆದು, ಬರುವ ಸಂಕ್ರಾಂತಿಯೇ ಶುಭ ದಿನ. ದಶಕಗಳ ನಿರೀಕ್ಷೆ ಕೈಗೂಡಲು ಅಂದು ಮುಹೂರ್ತ ನಿಗದಿಯಾಗಿದೆ. ಭವ್ಯ ಮಂದಿರದಲ್ಲಿ ರಾಮ ಲಲ್ಲಾನ ಪ್ರಭೆ ಪ್ರಜ್ವಲಿಸಲಿದೆ. ಲೋಕಸಭೆ ಚುನಾವಣೆ ನಡೆಯುವ ವರ್ಷ ಆರಂಭದಲ್ಲಿಯೇ ಈ ಪ್ರಸನ್ನ ವಿದ್ಯಮಾನ ಆಯೋಜನೆಗೊಂಡಿರುವುದು ಸಂಚಲನಕ್ಕೂ ಕಾರಣವಾಗಿದೆ.
ವಿಗ್ರಹಗಳನ್ನು ಚಂದಗಾಣಿಸುವ ಕೊನೆ ಹಂತದ ಕುಸುರಿಯಲ್ಲಿ ತೊಡಗಿರುವ ಶಿಲ್ಪಿಗಳು. ವಿಶಾಲ ರಸ್ತೆಗಳಿಗೆ ಟಾರ್ ಹಾಕುವ ತಯಾರಿ. ಆವರಣದ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಶೃಂಗರಿಸುವ ತರಾತುರಿ. ಗಡಿಬಿಡಿಯಿಂದ ಓಡಾಡುವ ನಿರ್ಮಾಣ ಕಾಮಗಾರಿಯ ಕುಶಲ ಕರ್ಮಿಗಳು, ವಾಸ್ತು ತಜ್ಞರು, ಎಂಜಿನಿಯರ್ಗಳು, ಸಾವಧಾನದಿಂದ ಸಂಚರಿಸುವ ಪುರೋಹಿತರು. ಇವರ ನಡುವೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಬಳಿ ಸಾರುತ್ತಿರುವ ಪುರುಷೋತ್ತಮ ಶ್ರೀರಾಮನ ಗೆಜ್ಜೆ ಸಪ್ಪಳ. ಎಲ್ಲಾ ವಿದ್ಯಮಾನಗಳನ್ನು ಕೌತುಕದಿಂದ ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು... ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ದೇವಲೋಕದ ದೃಶ್ಯ!
ಹೌದು, ಕೋಟ್ಯಂತರ ಭಾರತೀಯರು ತಲೆಮಾರುಗಳಿಂದ ಎದುರು ನೋಡುತ್ತಿರುವ ರಾಮ ಜನ್ಮಭೂಮಿಯಲ್ಲಿ ರಾಮನ ಪ್ರತಿಷ್ಠಾಪನೆಯ ಪುಣ್ಯ ಸಮಯ ಬಂದೇ ಬಿಟ್ಟಿದೆ. ರಘುನಂದ, ಸೀತಾಪತಿ, ಏಕ ಪತ್ನಿವ್ರತಸ್ಥ, ಸರ್ವಧರ್ಮ ಸಹಿಷ್ಣು ವ್ಯಕ್ತಿತ್ವದ ಆದರ್ಶ ಪುರುಷ ಶ್ರೀರಾಮನನ್ನು ಭವ್ಯ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಮಾಡಲು ಮುಹೂರ್ತ ನಿಗದಿಯಾಗಿದೆ. 2024 ವರ್ಷಾರಂಭದ ಸಂಕ್ರಾಂತಿ ನಂತರ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ. ನೂರಾರು ವರ್ಷಗಳ ನಂತರ ಗತ ವೈಭವ ಮೈತುಂಬಿಕೊಳ್ಳುತ್ತಿರುವ ಅಯೋಧ್ಯೆಯ ಇತಿಹಾಸ ಇನ್ನೂ ರೋಚಕ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಕಟ್ಟಿ, ಕೆಡವಿ, ಕಟ್ಟಲಾಗಿದೆ ಎಂದು ಇತಿಹಾಸ ಹೇಳುತ್ತದೆ. ಆದಿ ಪುರುಷ ಶ್ರೀರಾಮನ ಅಯೋಧ್ಯೆಯು ವರ್ಣನೆಗೂ ನಿಲುಕದ ಸುಭಿಕ್ಷ ನೆಲೆ. ಕಲೆ, ಸಂಸ್ಕೃತಿ, ಖುಷಿ, ವಿಶ್ವಾಸ, ಆನಂದದ ವೈಭವಿತ ರಾಮರಾಜ್ಯ. ರಾಮನು ಜಲ ಸಮಾಧಿ ತೆಗೆದುಕೊಂಡ ನಂತರದಲ್ಲಿ ಭವ್ಯ ಅಯೋಧ್ಯೆ ನಗರವು ಕಳೆಗುಂದಲು ಶುರುವಾಗಿತ್ತು ಎಂಬ ಐತಿಹ್ಯವಿದೆ.
ರಾಮನ ಮಗ ಕುಶನು ಅಯೋಧ್ಯೆಯನ್ನು ಪುನಃ ನಿರ್ಮಿಸಿದನು. ಕ್ಷೀಣಿಸಿದ ನಗರವು ಮರಳಿ ವೈಭವ ಕಂಡಿತು. ಅಯೋಧ್ಯೆಯನ್ನು ನೋಡಿಕೊಳ್ಳುತ್ತಿದ್ದ ಸೂರ್ಯವಂಶದ ಕೊನೆಯ ಮಹಾರಾಜ ಬೃಹದ್ಬಲನು ಮಹಾಭಾರತ ಯುದ್ಧದಲ್ಲಿ ಅಭಿಮನ್ಯುವಿನಿಂದ ಮರಣಹೊಂದಿದನು. ಕಾಲಾನಂತರದಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಯು ಮತ್ತೆ ಸೊರಗಲು ಶುರುವಾಯಿತು. ಅದರ ನಂತರ ರಾಜ ವಿಕ್ರಮಾದಿತ್ಯನು ಮತ್ತೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದನು ಎಂಬ ಇತಿಹಾಸ ಇದೆ.
ರಾಮನ ಮಗ ಕುಶನು ಅಯೋಧ್ಯೆಯನ್ನು ಪುನಃ ನಿರ್ಮಿಸಿದನು. ಕ್ಷೀಣಿಸಿದ ನಗರವು ಮರಳಿ ವೈಭವ ಕಂಡಿತು. ಅಯೋಧ್ಯೆಯನ್ನು ನೋಡಿಕೊಳ್ಳುತ್ತಿದ್ದ ಸೂರ್ಯವಂಶದ ಕೊನೆಯ ಮಹಾರಾಜ ಬೃಹದ್ಬಲನು ಮಹಾಭಾರತ ಯುದ್ಧದಲ್ಲಿ ಅಭಿಮನ್ಯುವಿನಿಂದ ಮರಣಹೊಂದಿದನು. ಕಾಲಾನಂತರದಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಯು ಮತ್ತೆ ಸೊರಗಲು ಶುರುವಾಯಿತು. ಅದರ ನಂತರ ರಾಜ ವಿಕ್ರಮಾದಿತ್ಯನು ಮತ್ತೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದನು ಎಂಬ ಇತಿಹಾಸ ಇದೆ.
ಅರಣ್ಯದಿಂದ ಸುತ್ತುವರಿದುಕೊಂಡಿದ್ದ ಅಯೋಧ್ಯೆಯನ್ನು ಗಮನಿಸಿದ ವಿಕ್ರಮಾದಿತ್ಯನು, ಶೋಧನೆಯ ಬಳಿಕ ಅದು ರಾಮ ಜನ್ಮಭೂಮಿ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಋಷಿಮುನಿಗಳಿಂದ ಸ್ಥಳದ ಮಹಿಮೆಯನ್ನು ತಿಳಿದು ಭವ್ಯವಾದ ಮಂದಿರ ಮತ್ತು ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಮಾಡಿದನು. ಅದರ ನಂತರ ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಮ ಮಂದಿರ ಸುಭಿಕ್ಷೆಯಲ್ಲಿತ್ತು. ಅಲ್ಲಿಂದ ಹಲವರ ಕಾಳಜಿಯಲ್ಲಿದ್ದ ರಾಮ ಮಂದಿರವು 14ನೇ ಶತಮಾನದಲ್ಲಿ ಅಪಾಯಕ್ಕೆ ಒಳಗಾಯಿತು.
ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಬೇಕು ಎನ್ನುವುದು ಕೋಟ್ಯಂತರ ಭಾರತೀಯರ ಕನಸಾಯಿತು. ತಲೆಮಾರುಗಳು ಉರುಳಿದರೂ ರಾಮ ಮಂದಿರದ ಕನಸು, ನಿರ್ಧಾರ ಬದಲಾಗಿರಲಿಲ್ಲ. ಅನೇಕ ಸಂಘರ್ಷ, ಸವಾಲು ಬಳಿಕ ಕೊನೆಗೂ ರಾಮ ಜನ್ಮಭೂಮಿಯಲ್ಲಿ ರಾಮನ ಪ್ರತಿಷ್ಠಾಪನೆಯ ಪುಣ್ಯ ಸಮಯ ಬಂದೇ ಬಿಟ್ಟಿದೆ. ಆದರ್ಶ ಪುರುಷನ ಅಯೋಧ್ಯೆಯ ಭವ್ಯ ಮಂದಿರ ಈಗ ಭಕ್ತರ ದರ್ಶನಕ್ಕೆ ಸನ್ನದ್ಧಗೊಂಡಿದೆ.
ಉತ್ತರದ ಅಯೋಧ್ಯೆಯಿಂದ ದಕ್ಷಿಣದ ಕನ್ಯಾಕುಮಾರಿ, ಇಂದಿರಾ ಪಾಯಿಂಟ್ (ಭಾರತದ ದಕ್ಷಿಣದ ತುದಿ) ದಾಟಿ ಲಂಕೆಯ (ಶ್ರೀಲಂಕಾ) ವರೆಗೆ ಕುರುಹುಗಳಿಂದಲೇ ಅಸ್ತಿತ್ವವನ್ನು ಸಾಕ್ಷೀಕರಿಸುವ ಶ್ರೀರಾಮನ ಬದುಕು ಭಾರತೀಯರ ಅಸ್ಮಿತೆಯಾಗಿ ಬೆಸೆದಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನಿಂದ ನಿರ್ಮಾಣವಾಗುತ್ತಿರುವ ಒಟ್ಟು ಮೂರು ಅಂತಸ್ತಿನ ರಾಮ ಮಂದಿರ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. ಕುಸುರಿ ಕಲೆಯ ಕಣ್ಮನ ಕೋರೈಸುವ ಕಲಾತ್ಮಕ ಭವ್ಯ ಸ್ಥಂಬಗಳ ಮೇಲೆ ಮಂದಿರ ನಿರ್ಮಾಣವಾಗಿದೆ.
2024ರ ಜ.22ರಂದು ಶ್ರೀರಾಮನ ಪ್ರಾಣ ಪತ್ರಿಷ್ಠೆ ಸಮಾರಂಭಕ್ಕೆ ಎಲ್ಲ ತಯಾರಿ ನಡೆದಿದೆ. ಆ ದಿನದ ಕಾರ್ಯಕ್ರಮಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆದಿಯಾಗಿ ಟ್ರಸ್ಟಿನ ಪ್ರಮುಖರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನೂ ನೀಡಿದ್ದಾರೆ.
ಬಿಗಿ ಭದ್ರತೆ
ನಿರ್ಮಾಣ ಹಂತದಲ್ಲಿರುವ ರಾಮ ಮಂದಿರಕ್ಕೆ ಉಗ್ರರ ಬೆದರಿಕೆ ಇರುವ ಕಾರಣಕ್ಕೆ ಬಿಗಿ ಭದ್ರತೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಮೊದಲ ಮಹಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ನಿತ್ಯ ಒಂದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 500 ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಮಂದಿರದ ಒಂದೊಂದು ಹಂತ ಮುಗಿಯುವಾಗಲೂ ಭವ್ಯತೆ ಮೇಳೈಸುತ್ತದೆ.ಅರ್ಚಕರ ನೇಮಕಾತಿ
ಭವ್ಯ ಮಂದಿರದಲ್ಲಿ ಹಲವು ದೇವರುಗಳ ಮಂಟಪ ಸ್ಥಾಪನೆಯಾಗಲಿದೆ. ಅದಕ್ಕಾಗಿ ಅರ್ಚಕರ ನೇಮಕಾತಿ ನಡೆಯುತ್ತಿದೆ. ಗುರುಕುಲ ಶಿಕ್ಷಣ ಆಗಿರುವ 20-30 ವರ್ಷದೊಳಗಿನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಪರೀಕ್ಷೆ ಮೂಲಕ ಅರ್ಚಕರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಆರು ತಿಂಗಳ ತರಬೇತಿ ಇರಲಿದೆ. ತರಬೇತಿ ಅವಧಿಯಲ್ಲಿ ಎರಡು ಸಾವಿರ ರೂ. ಶಿಷ್ಯವೇತನ ಕೂಡ ನೀಡಲಾಗುತ್ತದೆ. ಅಯೋಧ್ಯೆದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಟ್ರಸ್ಟ್ ಪ್ರಕಟಣೆ ಹೊರಡಿಸಿದೆ.ಭವ್ಯ ಮೂರ್ತಿ.
ರಾಮ ಮಂದಿರದ ಗರ್ಭಗುಡಿಯಲ್ಲಿ ಎರಡು ಮೂರ್ತಿಗಳು ಪ್ರತಿಷ್ಠಾಪನೆ ಆಗಲಿವೆ. ಸಣ್ಣ ಮೂರ್ತಿ ಎತ್ತಿಡುವ ಸ್ಥಿತಿಯಲ್ಲಿ ಇರಲಿದೆ. ಅದನ್ನು ಮೈಸೂರಿನ ಶಿಲ್ಪಿಯೇ ತಯಾರಿಸುತ್ತಿದ್ದಾರೆ ಎಂಬುದು ಹೆಮ್ಮೆ. ಶ್ರೀರಾಮನ ಆಕರ್ಷಕವಾದ 8.5 ಅಡಿ ಎತ್ತರದ ಇನ್ನೊಂದು ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. ಇದು ಗರ್ಭಗುಡಿಯಲ್ಲಿ ಸ್ಥಿರವಾಗಿ ಇರಲಿದೆ. ಎತ್ತರದ ಮುಖ್ಯ ಮೂರ್ತಿಯನ್ನು ಮೂರು ರಾಜ್ಯಗಳ ಕಲಾವಿದರು ತಯಾರಿಸುತ್ತಿದ್ದಾರೆ. ಸುಂದರವಾದ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. 2024 ಜನವರಿ 22ರಂದು ಎರಡೂ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ. ಗರ್ಭಗುಡಿ ಬಿಟ್ಟು ಇನ್ನೂ ಐದು ಮಂಟಪಗಳು ಇರಲಿವೆ.ರಾಮನಾಮ ಸ್ಮರಣೆಗೆ ಕರೆ.
ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ವೇಳೆ ಅಂದರೆ, 2024ರ ಜನವರಿಗೆ 22ರಂದು ಬೆಳಗ್ಗೆ 11 ಗಂಟೆಯೊಳಗೆ ಸಮೀಪದ ರಾಮ, ಹನುಮಂತ ಮಂದಿರದಲ್ಲಿ ರಾಮ ನಾಮ ಜಪ ಮಾಡುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ ಜನತೆಗೆ ಕರೆ ನೀಡಿದೆ. ಜನರು ತಮ್ಮ ಇಚ್ಛೆಗೆ ಅನುಗುಣವಾಗಿ ರಾಮನ ನಾಮ ಸ್ಮರಣೆ ಮಾಡಬಹುದು ಎಂದು ಟ್ರಸ್ಟ್ ಎಕ್ಸ್ ಖಾತೆಯಲ್ಲಿ ತಿಳಿಸಿದೆ.ಮಂದಿರದ ಮುಖ್ಯ ವಿಶೇಷಗಳು
- ಆವರಣದ ವಿಸ್ತೀರ್ಣ- 2.7 ಎಕರೆ
- ಮಂದಿರ ವಿಸ್ತೀರ್ಣ- 57,400 ಘನ ಅಡಿ
- ಮಂದಿರದ ಎತ್ತರ- 161 ಅಡಿ
- ಮಹಡಿ- 03
- ಮಂದಿರದ ದ್ವಾರ- 12
- ನಿರ್ಮಾಣ ವೆಚ್ಚ- 1800 ಕೋಟಿ ರೂ.
ಮಂದಿರ ಸುದಿನ.
- ಸುಪ್ರೀಂ ಕೋರ್ಟ್ ತೀರ್ಪು- ನವೆಂಬರ್ 19, 2019
- ಭೂಮಿ ಪೂಜೆ- ಆಗಸ್ಟ್ 5, 2020
- ತಳಪಾಯದಿಂದ ಕಟ್ಟಡ ಶುರು ಮಾಡಿದ್ದು- ಮಾರ್ಚ್ 15, 2021.


